ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ: ಸ್ವಚ್ಚತೆಯ ಮೂಲಕ ಗಮನ ಸೆಳೆದಿರುವ ಪಹರೆ ಸಂಘಟನೆಯ ಗೌರವಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾಗಿರುವ ರಾಮಾ ನಾಯ್ಕ ಅವರನ್ನ ನೇಮಕ ಮಾಡಲಾಗಿದೆ.

ಕಳೆದ ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಪಹರೆ ಸಂಘಟನೆ ಕಾರವಾರದಲ್ಲಿ ನಿರಂತರವಾಗಿ ಸ್ವಚ್ಚತೆ ಮಾಡಿಕೊಂಡು ಬರುವ ಮೂಲಕ ಇಡೀ ದೇಶದ ಗಮನ ಸೆಳೆದ ಸಂಘಟನೆಯಾಗಿದೆ. ಸಂಘಟನೆ ಪ್ರತಿ ವರ್ಷ ಗೌರವಾಧ್ಯಕ್ಷರನ್ನಾಗಿ ಹಿರಿಯ ಸದಸ್ಯರನ್ನ ನೇಮಕ ಮಾಡುತ್ತಾ ಬಂದಿದ್ದು ಕಳೆದ ಅವಧಿಯಲ್ಲಿ ಉದ್ಯಮಿ ಜಾರ್ಜ್ ಫರ್ನಾಂಡಿಸ್ ಗೌರವಾಧ್ಯಕ್ಷರಾಗುವ ಮೂಲಕ ಸಂಘಟನೆಯಲ್ಲಿ ಉತ್ತಮ ಕೆಲಸವನ್ನ ಮಾಡಿದ್ದರು.

ಈ ವರೆಗೆ ೮ ಗೌರವಾಧ್ಯಕ್ಷರನ್ನ ಸಂಘಟನೆ ಮಾಡಿದ್ದು ಸಂಘಟನೆಯ 9ನೇ ಗೌರವಾಧ್ಯಕ್ಷರಾಗಿ ರಾಮಾ ನಾಯ್ಕ ಅವರನ್ನ ಪಹರೆ ಕಾರ್ಯಕಾರಿಣಿ ಸದಸ್ಯರು ಸರ್ವಾನುಮತದಿಂದ ಆಯ್ಕೆಮಾಡಿದರು. ಪಹರೆ ಅಧ್ಯಕ್ಷ ನಾಗರಾಜ ನಾಯಕ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುಂದಿನ ಒಂದು ವರ್ಷ ಸಂಘಟನೆಯ ಕಾರ್ಯಚಟುವಟಿಕೆ ಹಾಗೂ ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸಲು ಮಾಡಬೇಕಾದ ಕೆಲಸದ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಟಿ.ಬಿ ಹರಿಕಾಂತ್, ಖಜಾಂಚಿ ಎಲ್ ಎಸ್ ಫರ್ನಾಂಡಿಸ್, ಸದಸ್ಯರಾದ ಜಿ.ಡಿ ಮನೋಜೆ, ಅಜಯ್ ಸಾಹುಕಾರ್, ಸದಾನಂದ ಮಾಂಜ್ರೇಕರ್, ಶಿವಾನಂದ ಶ್ಯಾನಭಾಗ, ಸಂತೋಷ್ ವೆರ್ಣೇಕರ್, ಖೈರುನ್ನೀಸಾ, ಸುಜಾತಾ ಥಾಮ್ಸೆ, ಸಂದೀಪ್ ಸಾಗರ್ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.